Search This Blog

Monday, April 27, 2009

ಬಿಟಿ ಬದನೆ ಕಾಟ!

ಮಾನ್ಯ ಮುಖ್ಯ ಮಂತ್ರಿಗಳು ಜನವರಿ ೨೬ರಂದು ಕೃಷಿ ಇಲಾಖೆ ಮತ್ತು ರಾಜ್ಯ ಸಾವಯವ ಕೃಷಿ ಮಿಷನ್ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬೃಹತ್ ‘ಕೃಷಿ ಚೈತನ್ಯ ಸಮಾವೇಶ’ ಮತ್ತು ನೇಗಿಲ ಯೋಗಿಯ ಪ್ರತಿಜ್ಞಾ ಸ್ವೀಕಾರ’ ಸಮಾರಂಭದಲ್ಲಿ ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಲಿದ್ದು ಬರುವ ಬಜೆಟ್‌ನಲ್ಲಿ ೨೦೦ ಕೋಟಿ, ಪ್ರತಿ ತಾಲ್ಲೂಕುಗಳಲ್ಲಿ ಗೋಶಾಲೆ ಮತ್ತು ಪ್ರತಿ ತಿಂಗಳು ಸಾವಯವ ಕೃಷಿಕನ ಮನೆಗೆ ಯಡಿಯೂರಪ್ಪ ಭೇಟಿ ಎಂದು ಘೋಷಿಸಿದರು. ಸರ್ಕಾರದ ಈ ದಿಟ್ಟ ಹೆಜ್ಜೆಗೆ ನಾಡಿನ ರೈತ ಸಮುದಾಯ ಬೆಂಬಲಿಸುತ್ತದೆ. ಬಜೆಟ್‌ನಲ್ಲಿ ಸಾವಯವ ಕೃಷಿಗೆ ಅನುದಾನವನ್ನು ಹೆಚ್ಚಿಸಿ ಇಡೀ ರಾಜ್ಯದ ರೈತರನ್ನು ಸಾವಯವ ಕೃಷಿಕರನ್ನಾಗಿ ಮಾಡುತ್ತಿರುವ ಸರ್ಕಾರದ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಸಾವಯವ ಪ್ರಮಾಣಿಕರಿಸುವ ಸಂಸ್ಥೆಗಳ ಪ್ರಕಾರ ‘ಕುಲಾಂತರಿ ಬೆಳೆಗಳನ್ನು’ ಬೆಳೆಸಬಾರದು ಎಂಬ ನಿಯಮವಿದೆ. ಕುಲಾಂತರಿ ಬೆಳೆಗಳನ್ನು ಬೆಳೆದ ಪಕ್ಷದಲ್ಲಿ ಸಾವಯವ ಪ್ರಮಾಣ ಪತ್ರವನ್ನು ನೀಷೇದಿಸಲಾಗುವುದು.

ಬಿ.ಟಿ ಎಂದರೇನು?
ಶೀಲಿಂದ್ರ, ಬ್ಯಾಕ್ಟೀರಿಯಾ, ವೈರಸ್, ಹಾವು, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು (ಉeಟಿe) ಹೊರತೆಗೆದು ಬದನೆ, ಟೊಮಟೊ, ಆಲೂಗಡ್ಡೆ, ಮೆಕ್ಕೆಜೋಳದಂಥ ಆಹಾರ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ಕುಲಾಂತರಿ ಬೆಳೆಗಳು. ತ್ರಿಶಂಕು ಬೆಳೆಗಳು, ಯಾವದೇ ರೀತಿಯ ಜೈವಿಕ ರಕ್ಷಣೆ ಪರಿಸರ ಅಥವಾ ಸೃಷ್ಠಿಸಿದ ಮಾನವನ ಕೈಯಲ್ಲಿಲ್ಲ. ಬಗೆಬಗೆಯ ಎಲ್ಲಾ ತರಕಾರಿ, ನಿಮಗಿಷ್ಟವಾದ ಹಣ್ಣುಗಳು ಹಾಗೂ ಗಿಡ ಮೂಲಿಕೆಗಳ ಮೇಲೂ ಪ್ರಯೋಗಿಸುವ ಕಾರ್ಯಕ್ರಮಗಳು ನಡೆದಿದೆ. ಇದು ನಮಗೆ ಗೊತ್ತಿಲ್ಲ. ಈ ಮೂಲಕ ನಮ್ಮನ್ನು ಪ್ರಯೋಗಾಲಯದ ಪ್ರಾಣಿಗಳನ್ನಾಗಿ” ಮಾಡಿ ಖೆಡ್ಡಕ್ಕೆ ಬೀಳಿಸುವ ಹುನ್ನಾರ ನಡೆದಿದೆ.

ನಮ್ಮ ರೈತ ಸಂಘದ ಹಿರಿಯ ಚೇತನ, ಒಡನಾಡಿಯಾಗಿದ್ದ ಪ್ರೋ. ನಂಜುಡಸ್ವಾಮಿಯವರು ಬಿ.ಟಿ ಹತ್ತಿಯನ್ನು ರೈತರ ಜಮೀನಿನಲ್ಲಿ ಕಿತ್ತು ದೇಶದಾಂತ ದೊಡ್ಡ ಆಂದೋಲನ ಮಾಡಿದ್ದರು. ಕರ್ನಾಟಕದ ರೈತ ಸಮುದಾಯದವರು ಮೊದಲಬಾರಿಗೆ ಬಹು ರಾಷ್ಟ್ರೀಯ ಕಂಪನಿಗಳಿಗೆ ಬಿಸಿ ಮುಟ್ಟಿಸದ್ದರು. ಕರ್ನಾಟಕವು ಪ್ರಥಮ ಬಾರಿಗೆ ಬಿ.ಟಿ ವಿರುದ್ದ ರೈತ ಸಮುದಾಯವು ಪ್ರೋ. ನಂಜುಡಸ್ವಾಮಿಯವರ ನಾಯಕತ್ವದಲ್ಲಿ ವಿರೋದ ವ್ಯಕ್ತಪಡಿದ್ದರು. ಆದರೆ ಈಗ ಕರ್ನಾಟಕದಲ್ಲಿ ಬಿ.ಟಿ ವಿರುದ್ದ ಮಾತನಾಡುವವರು ಕಡಿಮೆಯಾಗಿದ್ದಾರೆ. ರಾಜ್ಯವು ಸೇರಿದಂತೆ ಭಾರತದಲ್ಲಿ ಕೃಷಿಸಂಸ್ಕೃತಿ ಮತ್ತು ಕೃಷಿಯಲ್ಲಿನ ಜೀವವೈವಿಧ್ಯತೆ ಅನನ್ಯವಾಗಿದೆ. ಹಲವಾರು ನಾಟಿ ತಳಿಗಳೂ ರೈತರ ಮನೆಯಲ್ಲಿ ಜೀವಂತವಾಗಿವೆ. ಅಂದಾಜಿನ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು ಮೂವತ್ತು ಜಾತಿಯ ಬದನೆ ತಳಿಗಳು ಜಾಲ್ತಿಯಲ್ಲಿವೆ. ಅವುಗಳಲ್ಲಿ ಮುಖ್ಯವಾಗಿ ಉಡಿಪಿಯ ಗುಳ್ಳ, ಮುಸುಕು ಬದನೆ, ಮೊಳ ಬದನೆ, ಮುಳ್ಳು ಬದನೆ, ಇತ್ಯಾದಿಗಳು. ಇದನ್ನು ಬಹುರಾಷ್ಟ್ರೀಯ ಬೀಜ ಕಂಪೆನಿಗಳು ಹಾಗೂ ದಡ್ಡ-ವಿಜ್ಞಾನಿಗಳು ತಂತ್ರಜ್ಞಾನವೆಂಬ ಹೆಸರಿನಲ್ಲಿ ಹಾಳುಮಾಡುತ್ತಿವೆ. ಕೃಷಿಯಲ್ಲಿ ರೈತರಿಗೆ ಅನುಕೂಲವಲ್ಲದ, ಆರೋಗ್ಯಕ್ಕೆ ಹಾನಿಕಾರಕವಾಗುವಂತಹ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪ್ರಕೃತಿಗೆ ವಿರುದ್ದ ನಡೆಯುವ ಇಂಥ ಪ್ರಯೋಗಗಳು ನಿಷಿದ್ಧ. ಬಿ.ಟಿ.ಹತ್ತಿ ಮಾಡಿದ ಆವಾಂತರ ಮತ್ತು ಅಪಾಯಗಳು ಇನ್ನೂ ಕಣ್ಣ್ಮುಂದೆ ಇರುವಾಗಲೇ, ಅಡುಗೆಗೆ ಪ್ರತಿನಿತ್ಯ ಬಳಸುವ ಪ್ರಮುಖ ತರಕಾರಿ ಬದನೆಗೆ ವಂಶವಾಹಿ ಪರಿವರ್ತನೆ ಮಾಡಿ ಅದನ್ನು ವಿಷ ಮಾಡುತ್ತಿರುವುದು ನಮಗೆಲ್ಲಾ ದೊಡ್ಡ ಆಘಾತ ತಂದಿದೆ. ಮೊದಲ ಬಾರಿಗೆ ನಮ್ಮ ದೇಶದಲ್ಲಿ ಬಿ.ಟಿ.ಬದನೆ ರೂಪದಲ್ಲಿ ಕುಲಾಂತರಿ ಆಹಾರ ಬೆಳೆಯನ್ನು ಬಿಡುಗಡೆ ಮಾಡುವ ಯೋಜನೆ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಬಿ.ಟಿ.ಬದನೆಯ ಕ್ಷೇತ್ರ ಪ್ರಯೋಗಗಳು ನಡೆಯುತ್ತಿವೆ. ಕರ್ನಾಟಕದ ಧಾರವಾಡ ಕೃಷಿ ಸಂಶೋಧನಾ ಕೇಂದ್ರ ಬಿ.ಟಿ.ಬದನೆಯ ಕ್ಷೇತ್ರ ಪ್ರಯೋಗ ಮಾಡುತ್ತಿದೆ. ಇದರ ಜೊತೆಗೆ ಕೆಲವು ದೇಶಗಳಲ್ಲಿ ನಿಷೇದಕ್ಕೆ ಒಳಪಟ್ಟಿರುವ ಕುಲಾಂತರಿ ಆಹಾರಗಳನ್ನು ಮಾರುಕಟ್ಟೆಗೆ ತರುವ ಯೋಜನೆಯನ್ನು ಬಹುರಾಷ್ಟ್ರೀಯ ಕಂಪೆನಿಗಳು ಮಾಡುತ್ತಿವೆ. ‘ಈ ದೇಶದ ರೈತರು ಮತ್ತು ಗ್ರಾಹಕರು ಪ್ರಯೋಗಾಲಯದ ಪ್ರಾಣಿಗಳಲ್ಲ’ .. ಈ ಕುಲಾಂತರಿ ಬೆಳೆ ಮತ್ತು ಆಹಾರಗಳನ್ನು ಕರ್ನಾಟಕ ರಾಜ್ಯ ಸೇರಿದಂತೆ ಭಾರತ ದೇಶದಲ್ಲಿ ನಿಷೇಧಿಸಬೇಕು.

ಜನರಿಗೆ ವಿಷ ಕೊಟ್ಟರಾದರೂ ಲಾಭ ಗಳಿಸುವುದೇ ಬಹು ರಾಷ್ಟ್ರೀಯ ಕಂಪನಿಗಳ ಜಾಯಮಾನ. ಬಿಟಿ ಬದನೆ ಬೆಳೆಯುವ ಪ್ರಯೋಗದ ಮೂಲಕ ಜನರಿಗೆ ಕಂಪನಿ ಕಪಿಗಳು ದುಸ್ವಪ್ನವಾಗಿದ್ದಾರೆ. ದುರಂತವೆಂದರೆ ಸರ್ಕಾರ ಮತ್ತು ಸರ್ಕಾರ ಅಧೀನದ ಸಂಶೋದನಾ ಕೇಂದ್ರಗಳು ಕಂಪನಿಗಳಿಗೆ ಸಾತ್ ಕೊಡುತ್ತಿವೆ. ವಿಷಕಾರಿ ಬದನೆ ಬೆಳೆಯುವದಕ್ಕೆ ಸರಕಾರ ಅನುಮೊದನೆ ನೀಡುತ್ತೀವೆ. ಬಿಟಿ ಬದನೆ ಜೈವಿಕ ಸುರಕ್ಷತೆ ಕುರಿತು ಯಾವುದೇ ರೀತಿಯ ದೀರ್ಘಕಾಲದ ಅಧ್ಯಯನವಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯೂರೋಪಿಯನ್ ಸಂಘಟನೆಗಳು, ಜಪಾನು, ಆಫ್ರಿಕಾ ಮತ್ತು ದಕ್ಷಿಣ ಕೊರಿಯದಂಥ ಅನೇಕ ದೇಶಗಳು ಜಿ ಎಂ ಆಹಾರವನ್ನು ನಿಷೇಧಿಸಿದೆ ಹಾಗೂ ವಿರೋಧಿಸಿವೆ. ಭಾರತ ಒಂದೇ ದೇಶ ಈ ಜಿಎಂ ಬಗ್ಗೆ ಒಲವನ್ನು ತೋರಿಸಿದೆ. ಜಿ ಎಂ ತಂತ್ರಜ್ನಾನ ಎಂಬುದು ಧೇಶದ ಕೃಷಿ ಸಮುದಾಯಕ್ಕೆ ಒಂದು ಪರಿಹಾರ ಎಂದು ತೋರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕುಲಾಂತರಿ ಬೆಳೆಗಳು ನಮ್ಮ ಆರೊಗ್ಯದ ಮೇಲೆ, ಪರಿಸರಕ್ಕೆ, ಮಣ್ಣಿಗೆ, ಸಕಲ ಸಂಕುಲಕ್ಕೆ ಕೆಟ್ಟ ಪರಿಣಾಮ ಬೀರಲಿದೆ. ಇದಕ್ಕೆ ಜೀವಂತ ಉದಾಹರಣೆ ಆಂದ್ರಪ್ರಧೇಶದಲ್ಲಿ ರೈತನೊಬ್ಬ ಬಿ.ಟಿ ಕಂಪನಿ ವಿರುದ್ದ ಮೊಕದ್ದಮೆ ಹಾಕಿದ್ದಾನೆ. ಆತನ ಮೇಕೆಗಳು/ಆಡುಗಳು ಬಿ.ಟಿ ಹತ್ತಿ ಎಲೆಗಳನ್ನು ತಿಂದು ಸತ್ತಿವೆ. ಈ ರೈತ ಬಹಿರಂಗವಾಗಿ ಎದೆತಟ್ಟಿ ಕಂಪನಿ ವಿರುದ್ದ ಕಿಡಿಕಾರಿದ್ದಾನೆ. ಕುಲಾಂತರಿ ಆಹಾರ ಹಾಗು ಬೆಳೆಗಳನ್ನು ನಿಷೇಧಿಸಲು ಸುಮಾರು ೭೦,೦೦೦ ಜನ ಮಾನ್ಯ ಕೇಂದ್ರದ ಆರೋಗ್ಯ ಮಂತ್ರಿಗಳಾದ ಡಾ: ಅನ್ಬುಮಣಿ ರಾಮದಾಸ್‌ರವರಿಗೆ ಪತ್ರ ಬರೆದಿದ್ದಾರೆ. ಇದರ ಪರಿಣಾಮವಾಗಿ ಯಾವದೇ ಅಸುರಕ್ಷಿತ ಜಿ ಎಂ ಅಹಾರವನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಬಹಿರಂಗವಾಗಿ ಬಹು ರಾಷ್ಟ್ರೀಯ ಕಂಪನಿಗಳ ಈ ಅಸುರಕ್ಷಿತ ತಂತ್ರಜ್ಞಾನವನ್ನು ವಿರೋದ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿ ಡೋಂಗಿ ಭಾಷಣ ಮಾಡುವುದರಲ್ಲಿ ನಿಸ್ಸೀಮರು. ರೈತ ವಿರೋಧಿ ಬಿಟಿ ತಂತ್ರಜ್ಞಾನವನ್ನು ಬಲವಂತವಾಗಿ ಹೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಇದೆ. ಎಲ್ಲಾ ಪ್ರಜ್ಞಾವಂತ ಮತದಾರರಲ್ಲಿ ವಿನಂತಿಸಿ ಕೊಳ್ಳುವುದೆನಂದರೆ ಬಿಟಿ ವಿರೋಧಿ ರಾಜಕೀಯ ಪಕ್ಷಕ್ಕೆ ನಿಮ್ಮ ಮತ ಚಲಾಯಿಸಿ. ಬಿಗಿಯಾಗಿ ನಿಮ್ಮ ಪ್ರತಿನಿಧಿಯನ್ನು ಕೇಳಿ. ಆದರೆ ಕರ್ನಾಟಕದಲ್ಲಿ ಯಾವದೇ ರಾಜಕೀಯ ಪಕ್ಷಯು ಚಕಾರ ಎತ್ತಿಲ್ಲ. ಇದು ಒಳ್ಳೆ ಸಮಯ, ಜನ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಮಂಜುನಾಥ ಹೊಳಲು











No comments:

Post a Comment