Search This Blog

Thursday, March 15, 2012

Grafting in brinjal (Egg plant) that gives more yield

ಸಾಮಾನ್ಯವಾಗಿ ತರಕಾರಿ ಬೆಳೆಗಳಿಗೆ ಕಸಿ ಕಟ್ಟುವುದು ಕಡಿಮೆ ಎಂದೇ ಹೇಳಬಹುದು. ಆದರೆ ರಾಮನಗರದ ಜೆ. ಮಂಜುನಾಥ್ ಒಂದೇ ಗಿಡದಲ್ಲಿ ಎರಡು ಜಾತಿಯ ನಾಟಿ ಬದನೆ ಕಸಿ ಕಟ್ಟಿದ್ದಾರೆ. ಹೆಚ್ಚಿನ ಇಳುವರಿ ಪಡೆಯಲು ಕಸಿ ಗಿಡದಿಂದ ಸಾಧ್ಯವೆಂದು ತೋರಿಸಿ ಕೊಟ್ಟಿದ್ದಾರೆ.

ಆಸಕ್ತಿ, ಪರಿಶ್ರಮ ಮತ್ತು ಛಲ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮಂಜುನಾಥ್ ಅವರ ಈ ಕೆಲಸವೇ ಸಾಕ್ಷಿ. ಅವರಿಗೆ ಮೊದಲಿನಿಂದಲೂ ಗಿಡ-ಮರಗಳ ಮೇಲೆ ತುಂಬಾ ಪ್ರೀತಿ. ಕೃಷಿ ಕುಟುಂಬದ ಹಿನ್ನೆಲೆಯೊಂದಿಗೆ ಬೆಳೆದಿದ್ದು ಇದಕ್ಕೆ ಮುಖ್ಯ ಕಾರಣ. ಆದರೆ ಇದರ ಜತೆಯಲ್ಲಿಯೇ ಕಸಿ ಹಾಗೂ ಬೋನ್ಸಾಯ್ ಮಾಡುವುದು ಇವರ ಮೆಚ್ಚಿನ ಹವ್ಯಾಸ.
 
ತೋಟಗಾರಿಕೆ ಬೆಳೆಗಳಿಗೆ ಕಸಿ ಮತ್ತು ಬೋನ್ಸಾಯ್ ಮಾಡುವುದರಲ್ಲಿ ಪರಿಣತಿ ಪಡೆದಿದ್ದಾರೆ. ಮನೆಯ ಮುಂದಿನ ಚಿಕ್ಕ ಜಾಗದಲ್ಲಿ ಒಂದೇ ಬದನೆ ಗಿಡದಲ್ಲಿ ಹಲವಾರು ನಾಟಿ ಬದನೆಗಳನ್ನು ಕಸಿ ಮಾಡಿದ್ದಾರೆ.

ಅವರು 1997ರಲ್ಲಿ ಲಾಲ್‌ಬಾಗ್‌ನಲ್ಲಿ ಕಸಿ ಮತ್ತು ಬೋನ್ಸಾಯ್ ಮಾಡುವ ವಿಷಯದಲ್ಲಿ ಇಲಾಖೆ ವತಿಯಿಂದ ತರಬೇತಿ ಪಡೆದರು. ಅದೇ ಜ್ಞಾನ ಬಳಸಿಕೊಂಡು ವಿವಿಧ ಬೆಳೆಗಳಿಗೆ ಕಸಿ ಕಟ್ಟಲು ಪ್ರಾರಂಭಿಸಿದರು. ಆಗ ಒಂದೇ ಬದನೆ ಗಿಡದಲ್ಲಿ ಹಲವಾರು ಜಾತಿಯ ನಾಟಿ ಬದನೆಯನ್ನು ಕಸಿ ಕಟ್ಟಿದ್ದು ಪತ್ರಿಕೆಯಲ್ಲಿ ಓದಿದ್ದರಂತೆ. ಆಗಿನಿಂದಲೇ ಅವರ ಮನಸ್ಸಿನಲ್ಲಿ ಬದನೆ ಕಸಿ ಕಟ್ಟುವ ಆಸೆ ಗರಿ ಮೂಡಿತು.

ಅವರ ಸಂಶೋಧನಾ ಗುಣವೂ ಈ ವಿಷಯದಲ್ಲಿ ನೆರವಿಗೆ ಬಂತು. ಕಸಿ ಕಟ್ಟಲಿಕ್ಕೆ ಕಾಡಲ್ಲಿ ಅಥವಾ ರಸ್ತೆ ಪಕ್ಕದಲ್ಲಿ ಬೆಳೆಯುವ ಗುಳಸುಂಡೆ ಬದನೆಯ ಸ್ಟಾಕ್ (ತಳ ಗಿಡ) ಆಯ್ಕೆ ಮಾಡಿಕೊಂಡರು. ಗುಳಸುಂಡೆ ವಿಶೇಷ ಗುಣ ಹೊಂದಿದೆ.
 
ಅದಕ್ಕೆ ಬರ ತಡೆದುಕೊಳ್ಳುವ ಶಕ್ತಿ ಇದೆ. ಸುಮಾರು ಐದರಿಂದ ಆರು ವರ್ಷ ಕಾಯಿ ಕೊಡುತ್ತದೆ. ಇದನ್ನು ಹಳ್ಳಿಗಳಲ್ಲಿ ತರಕಾರಿ ರೂಪದಲ್ಲಿ ಬಳಸುತ್ತಾರೆ. ಮನೆಮದ್ದಾಗಿಯೂ ಗುಳಸುಂಡೆ ಕಾಯಿ ಮತ್ತು ಹಣ್ಣು ಬಳಕೆಯಲ್ಲಿದೆ. ಹೀಗಾಗಿ ಮನೆ ಮುಂದಿನ ಜಾಗದಲ್ಲಿ ಗುಳಸುಂಡೆ ಬದನೆ ಗಿಡಕ್ಕೆ ನೀಲಿ ಈರಂಗೇರೆ ಹಾಗು ಕೊತ್ತಿತಲೆ ಬದನೆಯನ್ನು ಕಸಿ ಮಾಡಿದರು.

ಕಸಿ ಹೇಗೆ?
ಅವರ ಪ್ರಕಾರ ಕಸಿ ಮಾಡುವುದು ಹೇಗೆ ಎಂದರೆ, ಮೊದಲು ಸಾಧಾರಣ ಗುಳಸುಂಡೆ ಗಿಡವನ್ನು ನಾಟಿ ಮಾಡಿಕೊಳ್ಳಬೇಕು. ಸುಮಾರು ಹತ್ತು ದಿವಸದ ನಂತರ ನಮಗೆ ಬೇಕಾದ ತಳಿಯ ಕಡ್ಡಿಯನ್ನು ಇದಕ್ಕೆ ಕಸಿ ಮಾಡಬೇಕು. ಹಾಗೆ ಎರಡು ತಿಂಗಳು ಕಸಿ ಕಟ್ಟಿದ ಗಿಡವನ್ನು ಬೆಳೆಸಿದರೆ ಪ್ರತಿ ತಿಂಗಳೂ ಸರಾಸರಿ 8 ರಿಂದ 12 ಕಿಲೊ ಬದನೆ ಬರುತ್ತದೆ. ಅದೇ ಗಿಡ ಸುಮಾರು ಐದು ವರ್ಷದವರೆಗೂ ಕಾಯಿ ಬಿಡುತ್ತದೆ.

ಅವರ ಅನುಭವದ ಮೇಲೆ ಹೇಳುವುದಾದರೆ ಒಂದು ಮನೆಗೆ ಒಂದು ಕಸಿ ಮಾಡಿದ ಬದನೆಯನ್ನು ನಾಟಿ ಮಾಡಿದರೆ ಆ ಮನೆಗೆ ಬೇಕಾಗುವಷ್ಟು ಕಾಯಿ ಸಿಗುತ್ತವೆ. ಹೀಗಾಗಿ ಅವರು ಅನೇಕ ವರ್ಷದಿಂದ ತಮ್ಮ ಮನೆಗೆ ಯಾವತ್ತೂ ಬದನೆಕಾಯಿ ಖರೀದಿಸಿಲ್ಲ. ಅವರೇ ಹಲವಾರು ಮನೆಗೆ ಉಚಿತವಾಗಿ ಬದನೆಯನ್ನು ಹಂಚಿದ್ದಾರೆ.

ಕಸಿ ಮಾಡಿದ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ನಿರಂತರ ಇಳುವರಿ ಪಡೆದುಕೊಳ್ಳಬಹುದು. ಐದು ವರ್ಷದವರೆಗೂ ಅದೇ ಸಸಿಯನ್ನು ಪೋಷಣೆ ಮಾಡಬಹುದು. ಒಂದೊಂದು ಗಿಡದಿಂದ ವರ್ಷಕ್ಕೆ ಸರಾಸರಿ 60 ರಿಂದ 70 ಕಿಲೊ ಬದನೆ ಪಡೆದುಕೊಳ್ಳಬಹುದು. 

ಅಂದರೆ ಐದು ವರ್ಷಕ್ಕೆ 300 ರಿಂದ 350 ಕಿಲೊ ಇಳುವರಿ ಒಂದೇ ಗಿಡದಿಂದ ಬರುತ್ತದೆ. ಕಸಿ ಗಿಡದಿಂದ ಬೆಳೆದ ಬೀಜಗಳು ಸರಿಯಾಗು ಹುಟ್ಟುವುದಿಲ್ಲ. ಹಾಗಾಗಿ ಬೀಜೋತ್ಪಾದನಗೆ ಕಸಿ ಗಿಡಗಳು ಯೋಗ್ಯವಲ್ಲ ಎಂದು ಹೇಳಲು ಅವರು ಮರೆಯುವುದಿಲ್ಲ.

ಅವರು ಅದೇ ಗುಳಸುಂಡೆ ಬದನೆ ಗಿಡಕ್ಕೆ ಟೊಮೆಟೊವನ್ನು ಕಸಿ ಕಟ್ಟಿದ್ದಾರೆ ಮತ್ತು ಅದರಿಂದ ಇಳುವರಿಯನ್ನೂ ಕಂಡಿದ್ದಾರೆ. ಆದರೆ ಕಸಿ ಮಾಡಿದ ಟೊಮೊಟೊ ಗಿಡ ಕೇವಲ ಆರು ತಿಂಗಳು ಬೆಳೆಯುತ್ತದೆ.

ಇದರ ಜೊತೆಗೆ ಬೆಂಗಳೂರು- ಮೈಸೂರು ರಸ್ತೆಯ ಕೆಂಗಲ್‌ನಲ್ಲಿ ಇರುವ ತೋಟಗಾರಿಕೆ ಇಲಾಖೆ ಫಾರಂನಲ್ಲಿ ಒಂದೇ ಮಾವಿನ ಮರಕ್ಕೆ ಬಾದಾಮಿ, ತೋತಾಪುರಿ, ಮಲ್ಲಿಕಾ, ರಸಪುರಿ, ಬೇನಿಷಾ ಹಾಗೂ ನೀಲಂ ಜಾತಿಯ ಮಾವನ್ನು ಕಸಿ ಮಾಡಿದ್ದಾರೆ. ಅವರ ಹತ್ತಿರ 12 ವರ್ಷದ ಆಲದ ಬೋನ್ಸಾಯ್ (ಕುಬ್ಜ) ಗಿಡವಿದೆ. ಈಚೆಗೆ ಕೆಂಗಲ್‌ನಲ್ಲಿ ನಡೆದ ಪುಷ್ಪಮೇಳದಲ್ಲಿ ಅದನ್ನು ನಾಗರಿಕರೊಬ್ಬರು 15 ಸಾವಿರ ರೂಪಾಯಿಗೆ  ಕೇಳಿದ್ದರಂತೆ.
 
ಆದರೆ ಇವರು ಅದರ ಮೇಲೆ ಪ್ರೀತಿ ಇರುವುದರಿಂದ ಮಾರಿಲ್ಲ. ಇವುಗಳ ಜೊತೆ 6 ವರ್ಷದ ಅರಳೆ ಹಾಗು ಇನ್ನಿತರ ಆಲಂಕಾರಿಕ ಸಸಿಗಳನ್ನು ಬೋನ್ಸಾಯ್ ಮಾಡಿದ್ದಾರೆ.
ಅವರಿಗೆ ಮಾವು, ಸಪೋಟ, ಬದನೆ, ಚಕ್ಕೋತ, ನಿಂಬೆ, ಗುಲಾಬಿ, ಕ್ರೋಟಾನ್, ಬೇಲ, ನೆಲ್ಲಿ ಹಾಗು ದಾಳಿಂಬೆ ಗಿಡಗಳಿಗೆ ಕಸಿ ಮಾಡಿದ ಅನುಭವವಿದೆ. ಅವರ ಹತ್ತಿರ ಕಸಿ ಕಟ್ಟಿದ ಬದನೆ ಗಿಡಗಳು ಕೂಡ ದೊರೆಯುತ್ತವೆ.
ಅವರ ಸಂಪರ್ಕ ಸಂಖ್ಯೆ 89040 58083. 

No comments:

Post a Comment